Wednesday 13 June 2012

ನಿರಭಿಮಾನದ ಪೊರೆ ಕಳಚಿ ಕನ್ನಡಾಭಿಮಾನ ಜಾಗೃತಗೊಳ್ಳಲಿ!


ಕನ್ನಡ ಬ್ಲಾಗ್ ಸಂಪಾದಕೀಯದಲ್ಲಿ ನನ್ನ ಬರಹ :

ಹಬ್ಬಕ್ಕೆಂದು ಕಳೆದ ವಾರ ಊರಿಗೆ ಹೋದಾಗ ನಾನು ಕಲಿತ ನನ್ನ ಪ್ರೀತಿಯ ಕನ್ನಡ ಶಾಲೆಗೆ ಹೋಗುವ ಭಾಗ್ಯ ನನ್ನದಾಯಿತು! ನೂರು ವರ್ಷ ವೈಭವದಿಂದ ಮೆರೆದು ಎಷ್ಟೋ ಅಮೋಘ ವ್ಯಕ್ತಿತ್ವಗಳನ್ನು ತಯಾರು ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ ಹೆಮ್ಮೆಯ ಶಾಲೆಯದು. ಹಾಗೆಯೇ ಶಾಲೆಯ ವರಾಂಡದಲ್ಲಿ ಒಮ್ಮೆ ಸುತ್ತಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಈಗಿನ ಸ್ಥಿತಿಯನ್ನು ನೋಡಿದಾಗ ಮನಸ್ಸಿಗೆ ನಿಜಕ್ಕೂ ಖೇದವಾಯಿತು.ಅತ್ಯಂತ ಪ್ರಶಾಂತ ವಾತಾವರಣದಿಂದ ಕೂಡಿದ್ದ ಆ ಶಾಲೆಯ ತರಗತಿ ಕೋಣೆಗಳಲ್ಲಿ ನೂರಾರು ಮಕ್ಕಳು ತುಂಬಿರುತ್ತಿದ್ದರು. ಆದರೀಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಣುತ್ತಿದ್ದುದನ್ನು ಗಮನಿಸಿ ವ್ಯಾಕುಲಗೊಂಡೆ. ಸದಾ ಚೈತನ್ಯದ ಚಿಲುಮೆಯಂತ್ತಿದ್ದ ಶಾಲೆಯ ಸುಂದರ ಪರಿಸರದಲ್ಲಿ ಗಾಢವಾದ ಮೌನ ಛಾಯೆ ಕವಿದುಕೊಂಡಂತೆ ಭಾಸವಾಯಿತು. ಮಕ್ಕಳಿಗಿಂತ ಶಿಕ್ಷಕರೇ ಜಾಸ್ತಿ ಇದ್ದಾರೇನೋ ಅನಿಸಿ ಈ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಪಾಠ ಹೇಳುವ ಉತ್ತೇಜನವಾದರೂ ಎಲ್ಲಿಂದ ಬರಬೇಕು ಎಂದುಕೊಂಡೆ.
ಹೌದು, ನಾನೀಗ ಹೇಳ ಹೊರಟಿರುವುದು ಕನ್ನಡ ಭಾಷೆ ಏಕೆ ಹಿಂದೆ ಸರಿಯುತ್ತಿದೆ ಮತ್ತು ತನ್ನ ಮಹತ್ವವನ್ನು ಏಕೆ ಕಳೆದುಕೊಳ್ಳುತ್ತಿದೆ ಎಂಬುದರ ಬಗ್ಗೆ. ಈ ಬಗ್ಗೆ ಹಿಂದಿರುಗಿ ನೋಡುತ್ತಾ ಹೋದಾಗ ಹತ್ತಾರು ಕಾರಣಗಳು ಕಣ್ಣೆದುರು ಬಂದು ನಿಲ್ಲುತ್ತವೆ.ನಮ್ಮದೇ ಅಕ್ಕ ಪಕ್ಕದ ರಾಜ್ಯಗಳಲ್ಲಿನ ಪ್ರಾದೇಶಿಕ ಭಾಷೆಯ ಜನರು ಹಲವು ಸಾಧನೆಗಳನ್ನು ಮಾಡಿ ದೇಶ-ವಿದೇಶಗಳ ಮಟ್ಟದಲ್ಲಿ ಬೆಳಕಿಗೆ ಬರುತ್ತಿದ್ದಾರೆ.ಆದರೆ ನಮ್ಮಲ್ಲಿ ಈ ಪ್ರಯತ್ನ ನಡೆಯುತ್ತಿಲ್ಲವೆಂಬುದೇ ಬೇಸರ ತರುವಂಥದ್ದು.ಅಂತ ಪಾಂಡಿತ್ಯ ಉಳ್ಳವರು ನಮ್ಮಲ್ಲಿ ಇಲ್ಲವೇ ಎಂಬೆಲ್ಲ ಪ್ರಶ್ನೆಗಳು ಮನದಲ್ಲಿ ಉದ್ಭವವಾಗುತ್ತವೆ.ಅದಕ್ಕೆ ಉತ್ತರ ಹುಡುಕಲು ಹೊರಟಾಗ ನಾನು ಕಂಡುಕೊಂಡಿದ್ದು- " ಖಂಡಿತ ಇದ್ದಾರೆ. ಬೇರೆ ಭಾಷೆಗಳಿಗಿಂತ ಹೆಚ್ಚಾಗಿದ್ದಾರೆ. ಅದ್ಭುತ ವಿಚಾರವಂತರು, ಮಹಾನ್ ಚಿಂತಕರಿದ್ದಾರೆ." ಎಂಬುದಾಗಿದೆ. ನಾನು ಸಾಮಾಜಿಕ ತಾಣಗಳಲ್ಲಿ ಕನ್ನಡದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆರಂಭಿಸಿದ ಮೇಲೆ ಕಂಡುಕೊಂಡ ಅಂಶವಿದು. ಅದೆಷ್ಟೋ ಸಾಹಿತಿಗಳು, ಕವಿಗಳು, ಚಿಂತಕರು, ಸಿನಿ ಕವಿಗಳು, ಕನ್ನಡದ ಕಂಪನ್ನು ಬಹು ವಿಧದಲ್ಲಿ ಪಸರಿಸಲು ನಿಂತಿರುವುದನ್ನು ಕನ್ನಡಿಗರು ಕಾಣುತ್ತಾರೆ.ಆದಾಗ್ಯೂ "ಕನ್ನಡದಲ್ಲಿ ಬರೆಯುವವರು ಇರಲಿ, ಕನ್ನಡ ಮಾತನಾಡುವವರನ್ನೂ ಹುಡುಕಿಕೊಂಡು ಹೋಗಬೇಕು" ಎಂದು ಎಷ್ಟೋ ಜನ ಭಾಷಣ ಬಿಗಿಯುವುದನ್ನು ಕೇಳಿದ ನನಗೆ, ಇಷ್ಟೆಲ್ಲಾ ಪ್ರತಿಭೆಯ ಮಹಾಪೂರ ಇದ್ದರೂ ಇಂಥಃ ನಿರಭಿಮಾನದ ಪರಿಸ್ಥಿತಿ ಯಾಕೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.
ಹೀಗೆ ಕಾರಣ ಹುಡುಕುತ್ತ ಹೋದಾಗ ಮೊಟ್ಟ ಮೊದಲು ಕಣ್ಣಿಗೆ ಕಂಡ ಉತ್ತರ- "ನಿರಭಿಮಾನ" ಮತ್ತು "ದುರಭಿಮಾನ". ನಮ್ಮ ಸುತ್ತ ಮುತ್ತಲಿನ ಭಾಷೆಗಳ ಬೆಳವಣಿಗೆಯನ್ನು ನೋಡಿದಾಗ, ಒಂದು ಹುಲ್ಲು ಕಡ್ಡಿಯನ್ನು ಬಂಗಾರವನ್ನಾಗಿ ತೋರಿಸುವಷ್ಟು ಭಾಷಾ ಪ್ರೇಮವನ್ನು ನಾವು ಕಾಣಬಹುದು. ಅವರ ಜೊತೆ ನಾವೂ ಪರ ಭಾಷೆಯ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುವುದು ಸರ್ವೇ ಸಾಮಾನ್ಯ ದೃಶ್ಯ. "ಹಿತ್ತಲ ಗಿಡ ಮದ್ದಲ್ಲ" ಎಂಬ ಜಾಯಮಾನದವರಾಗಿ ನಮ್ಮದೇ ಮನೆಯಲ್ಲಿರುವ ಮುತ್ತು ರತ್ನಗಳನ್ನು ತಿರಸ್ಕರಿಸಿ ಬೇರೆ ಮನೆಯ ಕಾಗೆ ಬಂಗಾರಕ್ಕೆ ಆಕರ್ಷಿತರಾಗುತ್ತಿದ್ದೇವೆ. ನಮ್ಮ ತಾಯಿಯನ್ನು ನಾವು ಪ್ರೀತಿಸದಿರುವಾಗ ಆ ಹೊಣೆಯನ್ನು ಬೇರೆಯವರ ಮೇಲೆ ಹೊರಿಸುವುದು ಎಷ್ಟು ಸಮಂಜಸ? ಅಗಾಧವಾದ ಸಾಹಿತ್ಯ ಭಂಡಾರವಿದೆ ನಮ್ಮ ಭಾಷೆಯಲ್ಲಿ. ಭಗವದ್ಗೀತೆಯ ಸಾಲಿನಲ್ಲಿ ನಿಲ್ಲುವ "ಕಗ್ಗ ಸಾಹಿತ್ಯ", ಬೀಚಿಯಂಥವರ ಅದ್ಭುತ ಹಾಸ್ಯ ಸಾಹಿತ್ಯವಿದೆ. ಶೃಂಗಾರ, ನಾಟಕ, ಕಾವ್ಯ, ಕಾದಂಬರಿ, ಕಥೆ,ವಿಚಾರ,ವಿಡಂಬನೆ,ವಿಮರ್ಶೆ, ಸಂಶೋಧನೆ ಇತ್ಯಾದಿ ಸಮಾಜಮುಖಿ ಚಿಂತನೆಯ ಎಲ್ಲ ಆಯಾಮಗಳಲ್ಲಿ ಯಾವ ಭಾಷೆಗೂ ಕಡಿಮೆ ಇಲ್ಲದ ಸಾಹಿತ್ಯ ಭಂಡಾರ ನಮ್ಮ ಭಾಷೆ ಹೊಂದಿದೆ ಎಂಬುದು ನಾವು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದಾದ ಹೆಮ್ಮೆಯ ವಿಚಾರ. ಪ್ರಸ್ತುತ ವರ್ತಮಾನದಲ್ಲಿ ನೋಡುವುದಾದರೆ ಅದೆಷ್ಟೋ ಜನ ಯುವ ಸಾಹಿತಿಗಳು ಸಕಾಲಿಕ ಸಾಹಿತ್ಯದಲ್ಲಿ ಅದ್ಭುತ ಸಾಧನೆ ಮಾಡುತ್ತ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ.ಇವರನ್ನೆಲ್ಲ ಮುಖ್ಯವಾಹಿನಿಗೆ ತಂದು ಇವರ ಪ್ರತಿಭೆ ಹೊರತರುವ ಹೆಚ್ಚುಗಾರಿಕೆ, ಮತ್ತು ಭಾಷಾಭಿಮಾನ ಕನ್ನಡಿಗರೆಲ್ಲರಲ್ಲಿ ಮೂಡಬೇಕಾಗಿದೆ.
ಕನ್ನಡವೆಂದು ಭಾಷಣದ ಮೇಲೆ ಭಾಷಣ ಬಿಗಿಯುವ ದೊಡ್ಡ ವ್ಯಕ್ತಿಗಳು, ಮತ್ತು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಖ್ಯಾತ ಲೇಖಕರು ತಮಗೆ ಪ್ರೀತಿ ಮತ್ತು ಅಭಿಮಾನದ ಧಾರೆ ಎರೆದು ಮುಂದೆ ತಂದವರು ಕನ್ನಡಿಗರೇ ಎಂಬುದನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಈ ಜನ ದುರಭಿಮಾನದ ಪರಾಕಾಷ್ಥೆಯಲ್ಲಿ ತಮ್ಮ ದೊಡ್ಡತನವನ್ನು ಮೆರೆಯಲು ಕನ್ನಡದ ಮೊಗ್ಗು ಮನಗಳನ್ನು ಚಿವುಟಿರುವ ನಿದರ್ಶನಗಳು ಎಷ್ಟೋ ಕಾಣಸಿಗುತ್ತವೆ. ಉತ್ಸಾಹದಿಂದ ಆಧುನಿಕತೆಯ ಜೊತೆ ಕನ್ನಡ ಬೆಳೆಸುವ ಯುವಕರ ಪ್ರಯತ್ನಗಳಿಗೆ ಆ ದೊಡ್ಡ ವ್ಯಕ್ತಿಗಳು ಪ್ರೋತ್ಸಾಹ ನೀಡಿ ಅವರಲ್ಲಿ ಮನಸ್ಥೈರ್ಯ ತುಂಬಬೇಕಾಗಿದೆ.ಕನ್ನಡದ ಕಾರ್ಯ ಎಲ್ಲಿಯೇ ನಡೆಯುತ್ತಿರಲಿ, ಅದನ್ನು ಯಾರೇ ಮಾಡುತ್ತಿರಲಿ ನಾನು ನೀನು ಎನ್ನದೇ ಇದು ನಮ್ಮದೆಂದು ತಿಳಿದು ಅದನ್ನು ಪ್ರೋತ್ಸಾಹಿಸುವ ಹೆಚ್ಚುಗಾರಿಕೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಬರಬೇಕಾಗಿದೆ.ಅದೆಷ್ಟೋ ಪ್ರತಿಭೆಗಳು ಬೇರೆ ರಾಜ್ಯಗಳಿಂದ ಬಂದು ಕನ್ನಡ ಕಲಿತು ಅಪಾರ ಪಾಂಡಿತ್ಯ ಮೆರೆದಿರುವುದನ್ನು ನೋಡಿದ್ದೇವೆ.ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯದ ಹಲವು ಆಯಾಮಗಳನ್ನು ಅರಿತು ಬರೆಯುವ ಸಮಾಜಮುಖಿ ಕವಿಗಳಿದ್ದಾರೆ. ಈ ಕವಿಗಳನ್ನೆಲ್ಲ ಒಗ್ಗೂಡಿಸಿ, ಪ್ರೋತ್ಸಾಹಿಸಿ ನಿಸ್ವಾರ್ಥವಾಗಿ, ತಮ್ಮ ಜನಪ್ರಿಯತೆಯನ್ನು ಒತ್ತೆಯಿಟ್ಟು ದುಡಿಯುತ್ತಿರುವ ಮಹನೀಯರಿದ್ದಾರೆ. ಇಂಥವರ ಕಾರ್ಯಗಳಿಗೆ ಪ್ರೋತ್ಸಾಹಿಸುವುದಿರಲಿ, ಅದನ್ನು ನೋಡಿ ಸಹಿಸಿಕೊಳ್ಳಲಾಗದೆ ಅದಕ್ಕೆ ಕಲ್ಲೆಸೆಯುವ ಎಷ್ಟೋ ಬುದ್ಧಿಜೀವಿಗಳು ನಮ್ಮ ನೆಲದಲ್ಲೇ ಇದ್ದಾರೆ ಎನ್ನುವುದು ವಿಪರ್ಯಾಸ.ದುರಭಿಮಾನವಿಲ್ಲದೆ ಕನ್ನಡದ ಹೆಸರಾಂತರು ಇಂಥಃ ಹತ್ತು ಹಲವು ಎಲೆ ಮರೆಯ ಕಾಯಂತಿರುವ ಪ್ರತಿಭೆಗಳನ್ನು ಹೊರ ತಂದು ಅಂಥವರಿಗೆ ನೀರೆರೆದು ಪೋಷಿಸಿ ತಮ್ಮ ನಿಜವಾದ ದೊಡ್ಡತನವನ್ನು ಪ್ರದರ್ಶಿಸಿ ತನ್ಮೂಲಕ ಕನ್ನಡ ಬೆಳೆಸುವ ಅಗತ್ಯ ಕೈಂಕರ್ಯ ಮಾಡುವಂತಾಗಬೇಕು.
ಅಲ್ಲಿ ಕನ್ನಡ ಉಪಯೋಗಿಸಬೇಕು, ಇಲ್ಲಿ ಕನ್ನಡ ಉಪಯೋಗಿಸಬೇಕು ಎಂದು ನೀಡುವ ಹೇಳಿಕೆಗಳು ಬರೀ ಹೇಳಿಕೆಯಾಗದೆ, ಕರ್ನಾಟಕದಲ್ಲಿ ಎಲ್ಲ ಕಡೆ ಕನ್ನಡದ ಉಪಯೋಗ ಬಲವಂತದಿಂದಾಗದೆ ಅದು ಸಹೃದಯತೆಯಿಂದ ಪರಸ್ಪರ ಒಗ್ಗೂಡುವಿಕೆ ರೂಪದಲ್ಲಿ ಜಾರಿಯಾಗುವಂತೆ ನಾವೆಲ್ಲಾ ಪ್ರಯತ್ನಿಸಬೇಕಾಗಿದೆ. ಎಲ್ಲ ಕಡೆ ಎದೆಯುಬ್ಬಿಸಿ, ಲವ ಲೇಶ ಅಳುಕಿಲ್ಲದೆ ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲಿ ವ್ಯವಹರಿಸಿ, ರಾಜ್ಯದಲ್ಲಿರುವ ಎಲ್ಲರಿಗೂ ಕನ್ನಡದ ಕಲಿಕೆ ಒಂದು ಅಗತ್ಯತೆ ಎಂಬ ಮಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಕನ್ನಡಿಗನೂ ವಹಿಸಿಕೊಂಡು ಹೋಗಬೇಕಾಗಿದೆ. ಆ ನಿಟ್ಟಿನಲ್ಲಿ ಕಾಯಾ ವಾಚಾ ಮನಸಾ ನಮ್ಮ ಕನ್ನಡ ಪ್ರೇಮವನ್ನು ತೋರಿಸುತ್ತಾ ನುಡಿದಂತೆ ನಡೆಯುವ ಔದಾರ್ಯ ನಮ್ಮದಾಗಬೇಕಾಗಿದೆ. ಈ ಕನ್ನಡದ ಸರ್ಕಾರವು ಸಹ ತನ್ನ ಜವಾಬ್ದಾರಿ ಅರಿತು ಕನ್ನಡಕ್ಕೆ ಪ್ರೋತ್ಸಾಹ ನೀಡುವ ಆದ್ಯ ಕೆಲಸವನ್ನು ಮಾಡಬೇಕು. ಜಾತಿ ಧರ್ಮದ ಮೇಲೆ ಇರುವ ಮೀಸಲಾತಿಯು ಕನ್ನಡ ಮಾಧ್ಯಮದ ಮೇಲೂ ಇರಲಿ.ಕನ್ನಡ ಮಾಧ್ಯಮದಲ್ಲಿ ಕಲಿಯುವವರಿಗೆ ಪ್ರೋತ್ಸಾಹ,ಉತ್ತೇಜನ ದೊರಕಬೇಕಾಗಿದೆ. ರಾಜ್ಯೋತ್ಸವ ಪ್ರಶಸ್ತಿಗಳಂತ ಸನ್ಮಾನಗಳು ವ್ಯಾಪಾರವಾಗದೆ, ಅವು ಅರ್ಹರಿಗೆ ದಕ್ಕಿ ಅಂಥವರಿಂದ ಮತ್ತಷ್ಟು ನಿಸ್ವಾರ್ಥ ಸೇವೆ ಲಭ್ಯವಾಗುವಂತಾಗಬೇಕು.
ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ಕಣ್ಣಿಗೆ ಕಾಣದೆ ಮಸುಕಾಗಿ ಬಿಟ್ಟಿದೆ. ಇವನ್ನು ಹೊರಕ್ಕೆ ತಂದು ಪೋಣಿಸಿ ಸುಂದರ ಹಾರ ಮಾಡಿ ಕನ್ನಡಾಂಬೆಯ ಕೊರಳಿಗೆ ಹಾಕಿ ನಮ್ಮ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ಮೆರೆಯುವ ಅಭಿಮಾನ,ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಚಿಗುರಬೇಕು.ಕನ್ನಡ ಕಳೆದು ಹೋಗುತ್ತಿದೆ ಎಂದು ವ್ಯಾಕುಲವಾಗಿ ಮಾತನಾಡುವ ಬದಲು, ನಮ್ಮ ಬಳಿಯೇ ಇರುವ ಸಿರಿಗನ್ನಡದ ಸಿರಿಯನ್ನು ಜಗತ್ತಿಗೆ ತೋರಿಸುವ ಸದಾಶಯ ಪ್ರತಿಯೊಬ್ಬನಲ್ಲೂ ಮೂಡಿ ಬರಬೇಕು.ಇಂಥ ಮಹತ್ತರವಾದ ಸೇವೆಯಲ್ಲಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ತನ್ನ ಛಾಪನ್ನು ಅಚ್ಚಳಿಯದಂತೆ ಮೂಡಿಸಿಕೊಂಡಿರುವ ನಮ್ಮ ಈ "ಕನ್ನಡ ಬ್ಲಾಗು" ತನ್ನ ಪ್ರಾಮಾಣಿಕ ಮತ್ತು ನಿಸ್ಪೃಹವಾದ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆವು.

No comments:

Post a Comment