Tuesday 14 August 2012

ಸ್ವಾತಂತ್ರ್ಯೋತ್ಸವ ನಿತ್ಯೋತ್ಸವವಾಗಲಿ



"ದೇಶಕ್ಕೆ ಏನಾದರೂ ಮಾಡಬೇಕೆಂದುಕೊಂಡಿರುವೆಯಾ? ಹಾಗಿದ್ದರೆ ಸೈನ್ಯ ಸೇರು, ಅಥವಾ ಸರ್ಕಾರಿ ಕೆಲಸಕ್ಕೆ ಸೇರು.ಅಲ್ಲಿದ್ದರೆ ಮಾತ್ರ ನೀನು ದೇಶಕ್ಕೋಸ್ಕರ ಏನಾದರೂ ಮಾಡಬಲ್ಲೆ. ಇಲ್ಲದಿದ್ದರೆ ಏನು ಮಾಡಿದರೂ ಉಪಯೋಗವಿಲ್ಲ." ಎಂದು ಗೆಳೆಯನೊಬ್ಬ ಕಡ್ಡಿ ಮುರಿದಂತೆ ಹೇಳಿದ್ದು ನೆನಪಾಯ್ತು. ಅವನಲ್ಲಿ ಒಂದು ಕಿಡಿ ಇತ್ತು. ದೇಶಕ್ಕೋಸ್ಕರ ಏನಾದರೂ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಐ.ಟಿ. ಉದ್ಯೋಗ ತೊರೆದು ಸೈನ್ಯ ಸೇರಬೇಕು ಎಂದು ನಿರ್ಧಾರ ಮಾಡಿಕೊಂಡು ಎಲ್ಲ ಸೇನಾ ಹುದ್ದೆಗಳಿಗೂ ಅರ್ಜಿ ಹಾಕುತ್ತಿದ್ದ. ಆದರೆ ದೈಹಿಕ ಪರೀಕ್ಷೆಯಲ್ಲಿ ಪಾಸಾಗುವ ಅರ್ಹತೆಯಿಲ್ಲದಿರುವುದರಿಂದ ಅವನ ಆ ಕನಸು ಕನಸಾಗೇ ಉಳಿಯಿತು. ಅವನ ಮನಸ್ಸು ಕುಗ್ಗಿ ಹೋಯಿತು. ಮಾಡುವ ಕೆಲಸದಲ್ಲೂ ತೃಪ್ತಿಯಿಲ್ಲದೆ, ಧ್ಯೇಯವೂ ಈಡೇರದೇ ತ್ರಿಶಂಕು ಸ್ಥಿತಿಗೆ ಬಂದ. 

ನಮ್ಮೆಲ್ಲರಲ್ಲೂ ಒಂದಲ್ಲ ಒಂದು ಹಂತದಲ್ಲಿ ಇಂತಹ ದೇಶಸೇವೆಯ ಕಿಡಿ ಹೊತ್ತುವುದು ಸಹಜ. ಸೈನ್ಯಕ್ಕೋ, ಆರಕ್ಷಕ ಹುದ್ದೆಗೋ ಅಥವಾ ಇನ್ಯಾವುದೋ ಇಂತಹ ಸ್ಥಾನದಲ್ಲಿ ನಿಂತು ದೇಶ ಉದ್ಧಾರ ಮಾಡಬೇಕೆನ್ನುವ ಹಂಬಲ ಬರುವುದುಂಟು. ಆದರೆ ಹಲವು ಸಹಜ ಕಾರಣಗಳಿಂದಾಗಿ ಎಲ್ಲರ ಆಸೆಯೂ ಈಡೇರದಿರುವುದೂ 
ಸತ್ಯ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಆ ಕಿಡಿ ತಣ್ಣಗಾಗಿ ಮತ್ತೆ ನಮ್ಮ ಮಾಮೂಲು ಜೀವನಡೆದೆ ಮುಖ ಮಾಡಿ, ಆಮೇಲೆ ಎಂದೋ ಸ್ವಾತಂತ್ರ್ಯೋತ್ಸವವೋ, ಗಣರಾಜ್ಯ ದಿನವೋ ಬಂದಾಗ ಮತ್ತೆ ಇಂಥ ಕಿಡಿ ಹೊತ್ತಿ "ಜೈ ಹಿಂದ್" ಎಂದು ಕೂಗಿ ಸೆಲ್ಯೂಟ್ ಮಾಡುವುದು ಸಾಮಾನ್ಯ. ಮತ್ತೆ ಅದೇ ಕಥೆ. ದೇಶ ಇದ್ದಲ್ಲಿಯೇ ಇದೆ. 
ನಾವೆಲ್ಲಾ ನಮ್ಮ ವೈಯಕ್ತಿಕ ಕೆಲಸಗಳಲ್ಲಿ ಮಗ್ನ. ಮತ್ತೆ ಸಮಯ ಸಿಕ್ಕಾಗ-"ಅದು ಹೀಗೆ ಇದು ಹಾಗೆ, ನಮ್ಮ ದೇಶ ಉದ್ಧಾರ ಆಗುವುದಿಲ್ಲ" ಎಂಬ ನಿರಾಶಾವಾದದ ಮಾತುಗಳು. ಇದು ನಮಗೆ ಕಾಣಸಿಗುವ ಸರ್ವೇ ಸಾಮಾನ್ಯ ದೃಶ್ಯ. 

ಈ ವಿಷಯದ ಬಗ್ಗೆ ಯೋಚನೆ ಮಾಡಿದಾಗ- ಸೈನ್ಯ, ಅಥವಾ ರಕ್ಷಣಾ ಪಡೆಗೆ ಸೇರದೆ ದೇಶದುದ್ಧಾರ ಮಾಡಲು ಸಾಧ್ಯವಿಲ್ಲವೇ? ಸೈನಿಕರು ಹೋರಾಡಿ ಗಡಿ ರಕ್ಷಣೆ ಮಾಡುತ್ತಾರೆ.ಆದರೆ ದೇಶದ ಒಳಗಿರುವ ಹೊಲಸನ್ನು ತೆಗೆಯುವವರ್ಯಾರು? ಅದು ನಮ್ಮ ಹೊಣೆಯಲ್ಲವೇ? ಸರ್ಕಾರ ಮಾಡುವುದೆಂದು ನಾವು ಕೈಕಟ್ಟಿ ಕುಳಿತು, ಅವರೂ ಮಾಡದಿದ್ದಾಗ ಬಾಯಿಗೆ ಬಂದಂತೆ ಬೈದು ಮತ್ತೆ ಸುಮ್ಮನಾಗುವ ಚಾಳಿಯಿಂದ ನಾವು ಮುಂದುವರಿಯುವುದು ಸಾಧ್ಯವೇ? ಎಂಬ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕಾಗಿದೆ. "ನಾ ನಡೆದರೆ ದೇಶ ನನ್ನೊಡನೆ ನಡೆಯುತ್ತದೆ" ಎಂಬ ಜಾಹೀರಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಅದರಲ್ಲಿ ರಸ್ತೆಯ ಮಧ್ಯ ಮರ ಬಿದ್ದು ಸಂಚಾರ ಸ್ಥಗಿತವಾಗುತ್ತದೆ. ಎಲ್ಲರೂ ಯಾರ್ಯಾರಿಗೋ ಬೈಯ್ಯುತ್ತ ಕಾಯುತ್ತಿರುತ್ತಾರೆ. ಚಿಕ್ಕ ಹುಡುಗನೊಬ್ಬ ಮುಂದಾಳತ್ವ ವಹಿಸಿ ಆ ಮರವನ್ನು ದಾರಿಯಿಂದ ತೆಗೆಯಲು ಪ್ರಯತ್ನ ಮಾಡುತ್ತಾನೆ. ನಿಮಿಷದೊಳಗೆ ನೂರಾರು ಜನ ಒಟ್ಟಾಗಿ ಆ ಮರವನ್ನು ದಾರಿಯಿಂದ ತೆಗೆದು ತಮ್ಮ ತಮ್ಮ ಕೆಲಸಕ್ಕೆ ಹೋಗುತ್ತಾರೆ. ಇದನ್ನು ಪ್ರತಿ ಬಾರಿ ನೋಡಿದಾಗಲೂ ರೋಮಾಂಚನವಾಗುವುದು. ಇದನ್ನು ನೋಡಿದಾಗ ದೇಶಪ್ರೇಮದ,  ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಹಲವು ಆಯಾಮಗಳು ತೆರೆದುಕೊಳ್ಳುವವು. ರಸ್ತೆಯಲ್ಲಿ ಈ ಮರದ ದಿಮ್ಮಿ ತಡೆಯಾದಂತೆ, ನಮ್ಮ ದೇಶದ ಅಭಿವೃದ್ಧಿಗೆ ಅದೆಷ್ಟೋ ತಡೆಗಳಿವೆ. ಆದರೂ ಯಾರೋ ಅದನ್ನು ತೆಗೆಯುವರೆಂಬ ಹಂಬಲದಿಂದ ಕೂತಿರುತ್ತೇವೆ. 

ಇಂತಹ ಹತ್ತು ಹಲವು ತಡೆಗಳನ್ನು ಮೀರಿ ನಿಂತು ಅಭಿವೃದ್ಧಿಯ ಪಥದಲ್ಲಿ ಸಾಗಲು  ಅಪಾರ ಶಕ್ತಿ ಬೇಕಿಲ್ಲ. ನಾ ಮಾಡಬಲ್ಲೆ, ಇದು ನನ್ನ ದೇಶ ಎನ್ನುವ ನನ್ನತನ ಬೇಕು. ದೇಶಪ್ರೇಮದ ಪವಿತ್ರ ಭಾವ ಮತ್ತು ಶೃದ್ಧೆ ಇದ್ದಲ್ಲಿ, ನನ್ನೊಬ್ಬನ ಬಳಿ ಆಗದಿದ್ದರೂ ನಾ ಪ್ರಯತ್ನಿಸುವೆ ಎಂಬ ಹಂಬಲವಿದ್ದಲ್ಲಿ ಎರಡು ಕೈ ಹತ್ತಾಗಿ, ಹತ್ತು ಕೈ ಸಾವಿರವಾಗಿ ಅದರಿಂದ ಒಂದು ಚಿಕ್ಕ ದೇಶಸೇವೆಯಾದರೂ ಅದು ತಾಯಿ ಭಾರತಿಗೆ ನಾವು ನೀಡುವ ದೊಡ್ಡ ನೈವೇದ್ಯ. ಸೈನ್ಯದಲ್ಲಿ ಅಥವಾ ಸರ್ಕಾರದ ಭಾಗವಾಗಿದ್ದಾರೆ ಮಾತ್ರ ನಾವು ದೇಶಸೇವೆ ಮಾಡಬಹುದೆಂಬ 
ಸೀಮಿತ ಚೌಕಟ್ಟಿನೊಳಗೆ ಇರುವ ಚಾಳಿಯನ್ನು ನಾವು ಬಿಡಬೇಕಾಗಿದೆ. ಅವರೆಲ್ಲರಿಗಿಂತ ಸ್ವತಂತ್ರವಾಗಿ, ನಮ್ಮದೇ ರೀತಿಯಲ್ಲಿ ದೇಶಸೇವೆ ಮಾಡುವ ಅವಕಾಶ ನಮ್ಮಲ್ಲಿದೆ. ನಮ್ಮೊಳಗೆಹೊತ್ತುವ ಆ ಕಿಡಿಯಿಂದ ಭಾರತಾಂಬೆಗೆ ಪ್ರಣತಿಯನ್ನು ಬೆಳಗಿ ಅದರಲ್ಲಿ ನಮ್ಮ ಕರ್ತವ್ಯ ಮತ್ತು ನಿಸ್ವಾರ್ಥ ಸೇವೆಯ ಎಣ್ಣೆ ಹಾಕುವ ಕೆಲಸವಾಗಲಿ. ಹೊಸ ಬದಲಾವಣೆಗೆ ನಾ ನಾಂದಿಯಾಗಬಲ್ಲೆ ಎಂಬ ಧನಾತ್ಮಕ ಅಚಲ ನಿರ್ಧಾರ ಅಭಿವೃದ್ಧಿಗೆ ನಾಂದಿಯಾಗಲಿ. ದೇಶಭಕ್ತಿ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯ ನಿರಂತರವಾಗಿರಲಿ.

ಜೈ ಹಿಂದ್ 

1 comment:

  1. ಗಡಿಯಲ್ಲಿ ವೈರಿಗಳೊಡನೆ ಸೆಣಸಾಡುವ ವೀರನಷ್ಟೇ ದೇಶದೊಳಗೂ ನಿಜ ದೇಶ ಭಕ್ತಿ ಇಂದ ಮಾನವತೆಯಿಂದ ಹೋರಾಡುವ ಮಾನವತಾ ವಾದಿಯೂ ಮುಖ್ಯವಾಗುತ್ತಾನೆ. ಈ ನಿಟ್ಟಿನಲ್ಲಿ ಈ ಬರಹ ಬಹು ಪ್ರಸ್ತುತ.

    ReplyDelete