Wednesday 23 November 2011

ತಾಯಿ ಭಾರತಿ ಹೃದಯ ಮರುಗುತಿದೆ ಅಲ್ಲಿ.........






ಕತ್ತಲೆಯ ಗವಿಯಲ್ಲಿ 
ಬೆತ್ತಲೆಯ ಮನುಜರದೋ 
ಕಿತ್ತಾಡುತಿರುವ ಪರಿಯಿದೇನು?
ಜನನಿಯಾ ಉದರದಿಂ-
ದ್ಹೊರಗೆ ನೀ ಬರುವಾಗ 
ಜಾತಿಯಾ ಹಣೆ ಪಟ್ಟಿ ಇರುವುದೇನು?

ತಾಯಿ ಭಾರತಿಯಾ 
ತನುಜರೆಲ್ಲರು ನಾವು 
ದಾಯಾದಿ ಭಾವನೆಯು ಸಭ್ಯವೇನು?
ಸೋದರರು ಸಿಡಿದೆದ್ದು 
ತಮ್ಮಲ್ಲೇ ಹೊಡೆದಾಡೆ
ಅಮ್ಮನಾ ಹೃದಯವದು ಉಳಿವುದೇನು?

ಯಾವ ಜಾತಿಯ ತತ್ವ 
ದ್ವೇಷವನು ಸಾರುವುದು
ಜಾತಿಯಾ ಹೆಸರಲ್ಲಿ ಜಗಳ ಬೇಕೇ?
ನಮ್ಮ ದ್ವೇಷದ ಕಿಡಿಯ 
ಸಿಡಿಸಿ ಜ್ವಾಲೆಯ ತರಲು 
ದೇವರಾ ಹೆಸರನ್ನು ಬಳಸಬೇಕೆ?

ಭಾರತಮ್ಮಗೆ ಎಲ್ಲ ಜಾತಿ ಪಂಗಡ ಒಂದೆ
ಸಾಗರಕು ದೊಡ್ದದಾ 
ತಾಯಿ ಹೃದಯ 
ತನುಜ ನಿನ್ನನು ನೋಡಿ 
ತಾಯಿ ತಲೆ ತಗ್ಗಿಸಿರೆ 
ಇನ್ನು ಯಾಕಿಂಥಾ ಕೃತ್ಯ ಹೇಯ?


3 comments:

  1. ಪ್ರಾಮಾಣಿಕ ದೇಶ ಭಕ್ತನ, ಉಧಾತ್ತ ದೇಶ ಭಕ್ತಿ ಗೀತೆ ಇದು.

    ಮುಂಬೈ ಸರಣಿ ಸ್ಫೋಟ, ಭಯೋತ್ಪಾದಕ ದಾಳಿ, ಗಡಿಯಲಿ ನಿರಂತರ ಆತಂಕ, ಕೋಮು ಗಲಬೆ, ಭಾಷಾ ವೈಷಮ್ಯ, ಅರಾಜಕತೆ, ರಾಜಕೇಯ ಸ್ವಾರ್ಥ, ನರ ನಾಡಿಗಳಲಿ ಹಬ್ಬಿರುವ ಭ್ರಷ್ಯಾಚಾರ, ಹೆತ್ತವರ ಕಣ್ಣೀರ ಪಾಡು ಹೀಗೆ ತಾಯಿ ಭಾರತಿ ತತ್ತರಿಸಿ ಹೋಗಿದ್ದಾಳೆ.

    ಮತ್ತೊಬ್ಬ ಮಹಾತ್ಮ, ಭೋಸ್, ಶಾಸ್ತ್ರಿ ಅಥವಾ ಪಟೇಲ್ ಯಾವಾಗ ಬರುತ್ತಾರೋ?

    ReplyDelete
  2. ಸಾಗರಕು ದೊಡ್ದದಾ
    ತಾಯಿ ಹೃದಯ
    ತನುಜ ನಿನ್ನನು ನೋಡಿ
    ತಾಯಿ ತಲೆ ತಗ್ಗಿಸಿರೆ
    ಇನ್ನು ಯಾಕಿಂಥಾ ಕೃತ್ಯ ಹೇಯ?

    ಅತೀ ಸುಂದರವಾದಂತಹ ಸಾಲುಗಳು, ಪರೇಶ್. ನಿಮ್ಮ ಭಾವನೆಗೆ ನಮೋ ನಮಃ ಮದರ್ ಇಂಡಿಯಾ ಚಿತ್ರದ "ನರ್ಗಿಸ್"ಅವರ ಚಿತ್ರವನ್ನು ಸೂಕ್ತವಾಗಿ ಇಲ್ಲಿ ಉಪಯೋಗಿಸಿದ್ದೀರಿ.

    ತಾಯ ಮನವನರಿತವರು ಬಲು ವಿರಳ.
    ಅರಯದವನು ಮಹಾ ದುಷ್ಟ, ಮಹಾ ದುರಳ. ...........................................ಇನ್ನು ಧರ್ಮದ ಜಾತಿಯ ಭಾಷೆಯ ಕಾರಣಕ್ಕಾಗಿ ಹೊಡೆದಾಡುವವರಿಗೆ ಮತ್ತು ಅವರನ್ನು ಪ್ರೋತ್ಸಾಹಿಸಿ ಹತ್ತಿಕ್ಕುವವರಿಗೆ, ನಿಮ್ಮ ಕವನ ಮಾರ್ಗದರ್ಶಿಯಾಗಲಿ.
    ನಿಮಗಭಿನಂದನೆಗಳು. ಜಯ ಹೋ ಭಾರತ ಮಾತೆ.

    ReplyDelete