Friday 9 December 2011

ಎಂದು ಬರುವನೋ ನಾರಸಿಂಹ




ಅಂದೊಂದು ದಿನ ಅಟ್ಟಹಾಸದಿ ಮೆರೆಯುತಿಹ 
ದುಷ್ಟ ಹಿರಣ್ಯಕಶ್ಯಪ, ಕುವರ ಪ್ರಹ್ಲಾದನವ
ಭಕ್ತಿಯಲಿ ಕರೆಯುತಿರೆ
ಶೇಷಶಯನ ಹರಿ ಯೋಗ ನಿದ್ರೆಯ ಬಿಟ್ಟು
ಆಗಮಿಸಿ ಕಂಬದಿಂ ಕೊಲಲಿಲ್ಲವೇ ಅವನನು.. 

ಇಂದಿಲ್ಲಿ ಓಡಾಡುತಿಹರು ನೂರಲ್ಲ, ಸಾವಿರ
ಹಿರಣ್ಯಕಶ್ಯಪರು, ಕೇರಿ ಕೇರಿಯಲಿ 
ತಲೆ ಎತ್ತಿ, ಕಿತ್ತು ತಿನ್ನುತಲಿ ದೇಶವನು
ಸಾವಿಲ್ಲ ಇವರಿಗೆ ರಕ್ತ ಬೀಜಾಸುರ ವಂಶ 
ನಾಚಿಕೆ ಬಿಟ್ಟು, ಮೆರೆಯುವಾ ವರ ಪಡೆದಿಹರು 
ಹುಟ್ಟಡಗಿಸುವವರಾರು?

ಅಲ್ಲಿ ಮೊರೆಯಿಡುತಿಹರು ಪ್ರಹ್ಲಾದರು 
ದೈನ್ಯದಿ, ನ್ಯಾಯವಲ್ಲವಿದು, ದೇಶ ನಮ್ಮದು 
ಧರ್ಮ ಮಾರ್ಗದಿ ನಡೆಯುವುದೇ ಪರಿಯೆಂದು,
ನೇರ ಮಾಡುವ ಭರದಿ ನಾಯಿ ಬಾಲವ 
ಪ್ರತಿಭಟಿಸಿ ಹೆಣೆಯುತಿಹರು ನ್ಯಾಯ ಜಾಲವ 
ಇಲ್ಲಿವರು ಜಾಲವನು ಕತ್ತರಿಸಿ 
ಆಡುತಿರುವರಾಟವ

ಹುಟ್ಟಡಗಿಸಲು, ಇವರ ಮನೆಯ ಕಂಬವೊಡೆದು 
ಎಂದು ಬರುವನೋ ನಾರಸಿಂಹ??!!

1 comment:

  1. ನಿಮ್ಮ ಪ್ರಾರ್ಥನೆಗೆ ಸತ್ಯವೊಂದೇ ದಾರಿ.ಸತ್ಯವೇ ಅಂತಹ ನಿಮ್ಮ ಸಾಲುಗಳನ್ನು ಸೃಷ್ಟಿಸಿದ್ದು ಖುಷಿ ಆಯಿತು.ಚೆನ್ನಾಗಿದೆ ನಿಮ್ಮ ಆಲೋಚನೆಯ ಮೆಟ್ಟಿಲುಗಳು.

    ReplyDelete